ಕಳಸ ಲೈವ್ ವರದಿ
ಬಂಟರ ಸಾಂಸ್ಕೃತಿಕ ಪರಂಪರೆ, ಸಮಾಜಮುಖಿ ಚಿಂತನೆ, ಶಿಕ್ಷಣ ಪ್ರೋತ್ಸಾಹ ಹಾಗೂ ಸಂಘಟನಾ ಶಕ್ತಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾದ ಕಳಸ ಬಂಟರ ಯಾನೆ ನಾಡವರ ಸಂಘದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಭಾನುವಾರ ಅತ್ಯಂತ ಅಚ್ಚುಕಟ್ಟು, ಶಿಸ್ತುಬದ್ಧ ಹಾಗೂ ಸಂಭ್ರಮದಿ0ದ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆಟಿ ತಿಂಗಳ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಹಾರ ವೈವಿಧ್ಯವನ್ನು ಅನಾವರಣಗೊಳಿಸುವುದರ ಜೊತೆಗೆ ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕಮಗಳೂರು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನರೇಂದ್ರ ಶೆಟ್ಟಿ ಮಾತನಾಡಿ, ಬಂಟರು ಯಾರ ಮುಂದೆಯೂ ಕೈ ಒಡ್ಡುವವರಲ್ಲ, ಬದಲಾಗಿ ಅಗತ್ಯವಿರುವವರಿಗೆ ಕೈ ಎತ್ತಿ ದಾನ ಮಾಡುವವರು ಎಂಬ ಮಾತಿನ ಮೂಲಕ ಸಮಾಜದ ಸೇವಾ ಪರಂಪರೆಯನ್ನು ಬಿಂಬಿಸಿದರು. ಬಡ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ ನೆರವಾಗುವುದು ಅತ್ಯಂತ ಶ್ರೇಷ್ಠವಾದ ಸಮಾಜ ಸೇವೆ. ಈ ನಿಟ್ಟಿನಲ್ಲಿ ಕಳಸ ಬಂಟರ ಸಂಘವು ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ಹಾಗೂ ವಿದ್ಯಾ ಪುರಸ್ಕಾರ ನೀಡುತ್ತಿರುವುದು ಸಂತಸದ ಸಂಗತಿ ಎಂದರು. ತಮಗೆ ಸಮಾಜದಿಂದ ದೊರೆತ ಸಹಾಯವನ್ನು ವಿದ್ಯಾರ್ಥಿಗಳು ಸದಾ ಸ್ಮರಿಸಬೇಕು. ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ, ತಾವು ಬೆಳೆದ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮಂತೆಯೇ ಅವಕಾಶಕ್ಕಾಗಿ ಕಾಯುತ್ತಿರುವ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ನೆರವಾಗುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಅವರು ಕರೆ ನೀಡಿದರು.
ಕಳಸ ಭಾಗದಲ್ಲಿ ಬಂಟರ ಸಂಘ ಕಳೆದ ಆರು ವರ್ಷಗಳಿಂದ ಸಂಘಟನಾತ್ಮಕವಾಗಿ ಯಶಸ್ವಿಯಾಗಿ ಬೆಳೆದು ಬರುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜದ ಪ್ರತಿಯೊಬ್ಬ ಬಾಂಧವರೂ ಜಿಲ್ಲಾ ಸಂಘದ ಸದಸ್ಯತ್ವ ಪಡೆದುಕೊಂಡು ಸಂಘದಿAದ ದೊರೆಯುವ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ೧೨ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ಹಾಗೂ ೬೦ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರ ವಿತರಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಈ ಕಾರ್ಯಕ್ರಮ, ಸಮಾಜದ ಬೆಳವಣಿಗೆಗೆ ಶಿಕ್ಷಣವೇ ಬಲ ಎಂಬ ಸಂದೇಶವನ್ನು ಸಾರಿತು.

ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಸತತ ಒಂಬತ್ತು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಇದೀಗ ವರ್ಗಾವಣೆಗೊಂಡಿರುವ ವಿನಯಕುಮಾರ್ ಶೆಟ್ಟಿ ದಂಪತಿಗಳನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿರುವುದು ಕಾರ್ಯಕ್ರಮದ ಮಾನವೀಯ ಸ್ಪರ್ಶವನ್ನು ಹೆಚ್ಚಿಸಿತು.
ಆಟಿ ತಿಂಗಳ ವಿಶೇಷತೆಯನ್ನು ಸಾರುವಂತೆ ಸಂಘದ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಿದ ೪೫ಕ್ಕೂ ಹೆಚ್ಚು ಬಗೆಯ ಆಟಿ ಖಾದ್ಯಗಳನ್ನು ಪ್ರದರ್ಶಿಸಿದರು.
ಉಪ್ಪಿನಕಾಯಿ, ಸೌತೆ ಪಚ್ಚೋಡಿ, ಒಂದೆಲಗ ಚಟ್ನಿ, ಹುರುಳಿ ಚಟ್ನಿ, ತಜಂಕ್ ಪಲ್ಯ, ಕೆಸು ಗಸಿ, ಬಟಾಟೆ ಬೋಂಡಾ, ಉದ್ದಿನ ಬೋಂಡಾ, ಕಡ್ಲೆಬೇಳೆ ಚಟ್ಟಂಬಡೆ, ಮೆಂತೆ ಗಂಜಿ, ಅಕ್ಕಿ ಶ್ಯಾವಿಗೆ, ಶ್ಯಾವಿಗೆ ಹಾಲು, ಅಪ್ಪದಡ್ಯೆ, ಹಾಲು ಕಡುಬು, ಹಲಸಿನಹಣ್ಣು ಕಡುಬು, ಅರಶಿನ ಎಲೆ ಕಡುಬು, ಕಡ್ಲೆ ಬಲ್ಯಾರ್ ಪಲ್ಯ, ಮೀನು ಚಟ್ನಿ, ಕೋರಿ ರೊಟ್ಟಿ, ಇಡ್ಲಿ, ಚಿಕನ್ ಸುಕ್ಕ, ಮೊಟ್ಟೆ ಗಸಿ, ಚಿಕನ್ ಕಬಾಬ್, ಅತ್ರಸ, ಕೇಸರಿಬಾತ್, ಕಡ್ಲೆಬೇಳೆ ಪಾಯಸ, ಕಾಯಿ ಹೋಳಿಗೆ, ರಸಂ ಸೇರಿದಂತೆ ಹಲವು ಸಾಂಪ್ರದಾಯಿಕ ಖಾದ್ಯಗಳು ಎಲ್ಲರ ಗಮನ ಸೆಳೆದವು.

ಇದು ಕೇವಲ ಆಹಾರ ಮೇಳವಾಗಿರದೆ, ಮರೆಯಾಗುತ್ತಿರುವ ಸ್ಥಳೀಯ ಅಡುಗೆ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾಂಸ್ಕೃತಿಕ ಪ್ರಯತ್ನವಾಗಿತ್ತು.
ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.
ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಕಂಡುಬ0ದ ಅಚ್ಚುಕಟ್ಟುತನ, ಸಮಯಪಾಲನೆ, ಶಿಸ್ತುಬದ್ಧ ನಿರ್ವಹಣೆ ಹಾಗೂ ಸಂಘಟಿತ ಕಾರ್ಯವೈಖರಿ ಕಳಸ ಬಂಟರ ಸಂಘದ ಒಗ್ಗಟ್ಟು ಮತ್ತು ಕಾರ್ಯಕ್ಷಮತೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳು, ಸಂಘದ ಹಿತೈಷಿಗಳು ಹಾಗೂ ಸಮಾಜ ಬಾಂಧವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಸಾಂಪ್ರದಾಯಿಕ ಆಚರಣೆಯ ಮೂಲಕ ಬೇರುಗಳನ್ನು ನೆನಪಿಸಿಕೊಂಡು, ಶಿಕ್ಷಣದ ಮೂಲಕ ಭವಿಷ್ಯವನ್ನು ಕಟ್ಟುವ ಮತ್ತು ಸೇವೆಯ ಮೂಲಕ ಸಮಾಜಕ್ಕೆ ಮರಳಿಕೊಡುವ ಸಂದೇಶವನ್ನು ಆಟಿಡೊಂಜಿ ದಿನಾಚರಣೆ ಸಾರಿತು.
ಮಕ್ಕಳ ಪ್ರತಿಭೆ ಹಾಗೂ ಯುವಕರ ಉತ್ಸಾಹ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಒಂದಾಗಿ ಮೂಡಿಬಂದ ಈ ಕಾರ್ಯಕ್ರಮ ಬಂಟ ಸಮಾಜದ ಒಗ್ಗಟ್ಟು, ಸಂಸ್ಕೃತಿ ಮತ್ತು ಸಮಾಜಮುಖಿ ಚಿಂತನೆಗೆ ಮಾದರಿಯಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷೆ ಶುಭಾ ಶೆಟ್ಟಿ, ಕಾರ್ಯದರ್ಶಿ ವಿನಯ ಶೆಟ್ಟಿ, ಖಜಾಂಚಿ ಸುದರ್ಶನ್ ಶೆಟ್ಟಿ, ಬಾಳೆಹೊನ್ನೂರು ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕಿರಣ್ ಶೆಟ್ಟಿ, ಅರುಣ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ಥಿತರಿದ್ದರು
