
ಕಳಸ ಲೈವ್ ವರದಿ
ಸಂಸೆ ಜೈನ ಬಾಂಧವರ ವತಿಯಿಂದ ಎಂಟು ಸೀಮೆಯ ಜೈನ ಬಾಂಧವರಿಗಾಗಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ‘ಕೆಸರು ಗದ್ದೆ ಸಂಭ್ರಮ’ ಕಾರ್ಯಕ್ರಮವು ಸಂಸೆಯ ಅರಮನೆ ಗದ್ದೆಯಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಅಚ್ಚುಕಟ್ಟಾಗಿ ನೆರವೇರಿತು.
ಬೆಳಿಗ್ಗೆ ಚಾಲನೆಗೊಂಡ ಈ ಗ್ರಾಮೀಣ ಕ್ರೀಡಾ ಸಂಭ್ರಮದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಿಭಿನ್ನ ಹಾಗೂ ರೋಚಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರಿಗಾಗಿ ವಾಲಿಬಾಲ್, ಓಟದ ಸ್ಪರ್ಧೆ, ಜಾರು ಕಂಬದ ಮೇಲೆ ನಡೆಯುವುದು, ವೇಗ ನಡಿಗೆ, ಹಗ್ಗ ಜಗ್ಗಾಟ ಹಾಗೂ ಹಿಮ್ಮುಖ ನಡಿಗೆ ಸ್ಪರ್ಧೆಗಳು ನಡೆದರೆ; ಮಹಿಳೆಯರಿಗಾಗಿ ಥ್ರೋಬಾಲ್, ಓಟದ ಸ್ಪರ್ಧೆ, ವೇಗ ನಡಿಗೆ, ಹಗ್ಗ ಜಗ್ಗಾಟ, ಹಿಮ್ಮುಖ ನಡಿಗೆ ಮತ್ತು ಉಪ್ಪು ಮೂಟೆ ಸ್ಪರ್ಧೆಗಳು ಜರುಗಿದವು. ಪ್ರತಿಯೊಂದು ಸ್ಪರ್ಧೆಯಲ್ಲೂ ಸೀಮೆಯ ಜೈನ ಬಾಂಧವರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ವಿಶೇಷ ಅಂಗವಾಗಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ತಮ್ಮ ನಿಸ್ವಾರ್ಥ ಹಾಗೂ ಶ್ರೇಷ್ಠ ಸೇವೆಯನ್ನು ಪರಿಗಣಿಸಿ, ಸಂಸೆ ಸಮುದಾಯ ಆರೋಗ್ಯಾಧಿಕಾರಿ ಶ್ರೀ ಮಂಜುನಾಥ್ ರವರನ್ನು ಜೈನ ಬಾಂಧವರು ಹಾಗೂ ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಸೆ ಮತ್ತು ಕಳಸ ಸೀಮೆಯ ಗಣ್ಯ ವ್ಯಕ್ತಿಗಳ ನಿರಂತರ ಸಹಕಾರ, ಮಾರ್ಗದರ್ಶನ ಹಾಗೂ ಜೈನ ಬಾಂಧವರ ಅದ್ಭುತ ಒಗ್ಗಟ್ಟಿನ ಬಲದಿಂದ ಇಡೀ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು. ಕಾರ್ಯಕ್ರಮದಲ್ಲಿ ಸೀಮೆಯ ನೂರಾರು ಸಾರ್ವಜನಿಕರು ಹಾಗೂ ಮುಖಂಡರು ಭಾಗವಹಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
