
ಕಳಸ ಲೈವ್ ವರದಿ
ಇಲ್ಲಿನ ಸಂಸೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಖ್ಯಾತ ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಆವರಣ ಸಂದರ್ಶನ ಕಾರ್ಯಕ್ರಮ ನಡೆಯಿತು.
ಸಂದರ್ಶನ ಪ್ರಕ್ರಿಯೆಗೆ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಡೆಪ್ಯೂಟಿ ಮ್ಯಾನೇಜರ್ ಹೆಚ್.ಆರ್. ಹರಿಪ್ರಸಾದ್ ಮಾತನಾಡಿ ಇಂದಿನ ವೇಗದ ತಾಂತ್ರಿಕ ಜಗತ್ತಿನಲ್ಲಿ ಕೇವಲ ಅಂಕಗಳು ಮುಖ್ಯವಲ್ಲ, ಬದಲಾಗಿ ನೀವು ಕೆಲಸವನ್ನು ಕಲಿಯುವ ಹಸಿವು ಮತ್ತು ವೃತ್ತಿಪರ ಶಿಸ್ತನ್ನು ಬೆಳೆಸಿಕೊಳ್ಳುವುದು ಮುಖ್ಯ. ಟೊಯೋಟಾ ಸಂಸ್ಥೆಯು ಜಾಗತಿಕ ಗುಣಮಟ್ಟದ ಕಾರ್ಯವೈಖರಿಗೆ ಹೆಸರುವಾಸಿಯಾಗಿದೆ. ಇಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೇವಲ ಕೆಲಸ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ತರಬೇತಿಯೂ ಲಭ್ಯವಾಗಲಿದೆ. ಐಟಿಐ ಸಂಸ್ಥೆಯ ವಿದ್ಯಾರ್ಥಿಗಳು ಕಠಿಣ ಪರಿಶ್ರಮಿಗಳು ಎಂಬ ನಂಬಿಕೆ ನಮಗಿದೆ, ಆ ನಂಬಿಕೆಯನ್ನು ನೀವು ಉಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.
ಐಟಿಐ ಸಂಸ್ಥೆಯ ಪ್ರಾಚಾರ್ಯ ಸತೀಶ್ ಮಾತನಾಡಿ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ನೀಡುವುದಕ್ಕೆ ಸೀಮಿತವಾಗದೆ ಅವರ ಬದುಕಿಗೆ ದಾರಿದೀಪವಾಗುವಂತಹ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ಸದಾ ಮುಂದು. ಟೊಯೋಟಾ ಕಿರ್ಲೋಸ್ಕರ್ ಅಂತಹ ಪ್ರತಿಷ್ಠಿತ ಜಾಗತಿಕ ಸಂಸ್ಥೆಯು ನಮ್ಮ ಕಾಲೇಜು ಆವರಣಕ್ಕೆ ಬಂದು ಸಂದರ್ಶನ ನಡೆಸುತ್ತಿರುವುದು ನಮ್ಮ ಹೆಮ್ಮೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂದರ್ಶನವನ್ನು ಭಯವಿಲ್ಲದೆ ಎದುರಿಸಿ. ಇಲ್ಲಿ ಸಿಗುವ ಪ್ರತಿ ಅವಕಾಶವೂ ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಬದಲಾಯಿಸಬಲ್ಲದು. ತಾಂತ್ರಿಕ ಜ್ಞಾನದ ಜೊತೆಗೆ ವಿನಯವಂತಿಕೆಯನ್ನು ಬೆಳೆಸಿಕೊಂಡಾಗ ಮಾತ್ರ ನೀವು ವೃತ್ತಿಜೀವನದಲ್ಲಿ ಸುಸ್ಥಿರ ಪ್ರಗತಿ ಸಾಧಿಸಲು ಸಾಧ್ಯ.ಗ್ರಾಮೀಣ ಪ್ರದೇಶದ ಬಡತನದ ಕುಟುಂಬದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿರುವುದರಿಂದ ಕಂಪನೆಯು ಹೆಚ್ಚಿನ ವಿದ್ಯಾರ್ಥಿಗಳಿಗೆ ಕಂಪನಿಯಲ್ಲಿ ಅವಕಾಶವನ್ನು ನೀಡಬೇಕು ಎಂದು ಹೇಳಿದರು.
ಎರಡು ದಿನ ನಡೆದ ಸಂದರ್ಶನದಲ್ಲಿ 130 ವಿದ್ಯಾರ್ಥಿಗಳು ಭಾಗವಹಿಸಿ ಅಂತಿಮವಾಗಿ 78 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಆಯ್ಕೆಯಾದರು..
ಕಂಪನಿಯ ಅಧಿಕಾರಿಗಳು ವಿದ್ಯಾರ್ಥಿಗಳ ಶಿಸ್ತು ಮತ್ತು ಸಂಸ್ಥೆಯ ಮೂಲಭೂತ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ವಿಜಯ ಕುಮಾರ್, ಮನು ಕೆ.ಎಮ್, ನಾರಾಯಣ, ಮಲ್ಲಿಕಾರ್ಜುನ್ ಹೆ.ಆರ್, ಹೇಮಂತ್ ಗೌಡ, ವೆಂಕ ರೆಡ್ಡಿ, ಸಂಸ್ಥೆಯ ಶಿಕ್ಷಕರಾದ ಗುರುದತ್, ಗಿರೀಶ್ ಇದ್ದರು.
