ಕಳಸ ಲೈವ್ ವರದಿ
ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಬರುವ ಭಕ್ತರ ಪಾಲಿಗೆ ಕಳಸ-ಕೊಟ್ಟಿಗೆಹಾರ ರಸ್ತೆ ಈಗ ಸಾಕ್ಷಾತ್ ಯಮಲೋಕದ ಹಾದಿ ಯಾಗಿ ಮಾರ್ಪಟ್ಟಿದೆ. ಶನಿವಾರ ಮುಂಜಾನೆ ಬೆಂಗಳೂರಿನಿAದ ಹೊರನಾಡಿಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಾಳೆಖಾನ್ ತೋಟದ ಸುಮಾರು 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಒಂದು ವರ್ಷದ ಕಂದಮ್ಮ ಸೇರಿದಂತೆ ಒಟ್ಟು ಆರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೋಟಕ್ಕೆ ಬಿದ್ದ ಕಾರಿನಿಂದ ತಾವಾಗಿಯೇ ಹೊರಬಂದ ಪ್ರಯಾಣಿಕರು, ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಅದೃಷ್ಟ ಚೆನ್ನಾಗಿತ್ತು, ಜೀವ ಉಳಿಯಿತು’ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳಸ-ಬಾಳೂರು ನಡುವಿನ ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ಸಾವಿನ ಜೊತೆ ಸರಸವಾಡಿದಂತೆ. ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ದಿನನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ, ಇಲ್ಲಿನ ಇಕ್ಕಟ್ಟಾದ, ಕಡಿದಾದ ತಿರುವುಗಳು ಸರಣಿ ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಪಕ್ಕದ ಆಳವಾದ ಕಾಫಿ ತೋಟಕ್ಕೆ ವಾಹನಗಳು ಉರುಳುವುದು ಗ್ಯಾರಂಟಿ. ವರ್ಷಕ್ಕೆ ಹಲವಾರು ವಾಹನಗಳು ಇಲ್ಲಿ ತೋಟಕ್ಕೆ ಬೀಳುತ್ತಿದ್ದರೂ, ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತಿದೆಯೇ? ಎಂಬುದು ಸಾರ್ವಜನಿಕರ ನೇರ ಪ್ರಶ್ನೆ.
ಕಳಸ-ಕೊಟ್ಟಿಗೆಹಾರ ಮುಖ್ಯ ರಸ್ತೆಯಲ್ಲಿ ಸಿಗುವ ಕಲ್ಮಕ್ಕಿ, ಹಿನಾರಿ, ಬಾಳೆಖಾನ್, ಮರಸಣಿಗೆ, ಹಿರೇಬೈಲು, ಸುಂಕಸಾಲೆ ಹಾಗೂ ಕೆಳಗೂರು ಪ್ರದೇಶಗಳು ಸಾವಿನ ಮುನ್ಸೂಚನೆ ನೀಡುವ ಬ್ಲ್ಯಾಕ್ ಸ್ಪಾಟ್ಗಳಾಗಿವೆ. ಕಳೆದ ಕೆಲವೇ ದಿನಗಳ ಹಿಂದೆ ಕಲ್ಮಕ್ಕಿ, ಬಾಳೆಖಾನ್, ಹಿನಾರಿ ಗ್ರಾಮಗಳಲ್ಲಿ ಕಾರುಗಳು ತೋಟಕ್ಕೆ ಬಿದ್ದಿದ್ದರೆ, ಕೆಳಗೂರು ಗ್ರಾಮದಲ್ಲಿ ಸಿಮೆಂಟು ತುಂಬಿದ ಲಾರಿಯು ಕೂಡ ರಸ್ತೆಯಿಂದ ಆಳವಾದ ಕಂದಕಕ್ಕೆ ಬಿದ್ದಿತ್ತು.
ರಸ್ತೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ರಸ್ತೆ ಅಗಲೀಕರಣ ಮಾಡಲು ಯಥೇಚ್ಛ ಅವಕಾಶಗಳಿವೆ. ಆದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅತ್ಯಂತ ಅಪಾಯಕಾರಿ ಕಂದಕಗಳಿರುವ ಜಾಗದಲ್ಲೂ ಒಂದು ಸೂಚನಾ ಫಲಕ ಆಗಲಿ ಅಥವಾ ತಡೆಗೋಡೆ ಆಗಲಿ ಇಲ್ಲದಿರುವುದು ಇಲಾಖೆಯ ಅಟ್ಟಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಪರಿಚಿತ ಪ್ರವಾಸಿಗರು ರಾತ್ರಿ ಅಥವಾ ಮುಂಜಾನೆ ಹೊತ್ತಿನಲ್ಲಿ ಈ ರಸ್ತೆಯ ತಿರುವುಗಳು ತಿಳಿಯದೇ ಕಂದಕಕ್ಕೆ ಬೀಳುತ್ತಿದ್ದಾರೆ.
ಯಾರೋ ದೊಡ್ಡವರು ಸತ್ತ ಮೇಲಷ್ಟೇ ಇಲಾಖೆ ಎಚ್ಚರಗೊಳ್ಳುತ್ತಾ?” ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇಲಾಖೆಯು ತಕ್ಷಣವೇ ನಿದ್ದೆಯಿಂದ ಎದ್ದು ತಕ್ಷಣವೇ ಎಲ್ಲೆಲ್ಲಿ ರಸ್ತೆ ಅಗಲೀಕರಣ ಮಾಡಬಹುದು ಮತ್ತು ತಿರುವುಗಳನ್ನು ಸರಿಪಡಿಸಬಹುದು ಎಂಬುದರ ಕುರಿತು ಸರ್ವೆ ಮಾಡಿ ಕ್ರಮತೆಗೆದುಕೊಳ್ಳುವುದು ಅಲ್ಲದೆ ಆಳವಾದ ಕಂದಕವಿರುವ ಪ್ರದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಕ್ರ್ಯಾಶ್ ಬ್ಯಾರಿಯರ್ ಅಥವಾ ತಡೆಗೋಡೆಗಳನ್ನು ನಿರ್ಮಿಸಬೇಕು. ಹೊರಗಿನಿಂದ ಬರುವ ಚಾಲಕರಿಗೆ ಎಚ್ಚರಿಕೆ ನೀಡುವ ರೇಡಿಯಂ ಸೂಚನಾ ಫಲಕಗಳನ್ನು ಅಳವಡಿಸಬೇಕು.
ಇನ್ನಾದರೂ ಸಂಬ0ಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ, ರಕ್ತ ಹೀರುವ ಈ ರಸ್ತೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ಇಲಾಖೆಯೇ ಹೊಣೆಯಾದೀತು.
