
ಕಳಸ ಲೈವ್ ವರದಿ
ಕಳಸದಲ್ಲಿ ಪ್ರಪ್ರಥಮ ರಾಜ್ಯ ಜೈನ ಸಾಹಿತ್ಯ ಸಮ್ಮೇಳನ ಮೇ 18 ಕ್ಕೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕಳಸದ ಕೆಳಂಗಡಿಯಲ್ಲಿರುವ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಹಾಗೂ ನೂತನ ಬಸದಿಯ ಲೋಕಾರ್ಪಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 18-5-2025 ರಿಂದ 22-5-2025 ರವರೆಗೆ ನಡೆಯಲಿದ್ದು, ಪ್ರಥಮ ದಿನ ದಿನಾಂಕ 18-5-2025 ರಂದು ಒಂದು ದಿನ ಅದೇ ನೂತನ ಬಸದಿಯ ಪಕ್ಕದ ಶ್ರೀ ಮಹಾವೀರಭವನದಲ್ಲಿ ರಾಜ್ಯ ಮಟ್ಟದ ಪ್ರಪ್ರಥಮ ಜೈನ ಸಾಹಿತ್ಯ ಸಮ್ಮೇಳನವನ್ನು,ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳಸ ಮತ್ತು ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆಸಲು ಸ್ವಾಗತ ಸಮಿತಿ ಉದ್ದೇಶಿಸಲಾಗಿದೆ.
ಕಳಸದ ಧಾರ್ಮಿಕ ಸೇವಾತತ್ಪರಾಗಿರುವ ಕೆ.ಸಿ ಧರಣೇಂದ್ರಯ್ಯ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಅಂದು ಬೆಳಿಗ್ಗೆ ಧ್ವಜಾರೋಹಣ ನಂತರ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ,ಉದ್ಘಾಟನಾ ಕಾರ್ಯಕ್ರಮ ನಂತರ ಕಳಸ ಸೀಮೆ ಇತಿಹಾಸ ಕುರಿತ ಗೋಷ್ಠಿ ಮತ್ತು ಕವಿಗೋಷ್ಟಿಗಳು ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿದೆ.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮ್ಮೇಳನದಲ್ಲಿ ನಾಡಿನ ಹಲವಾರು ಜೈನ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ಸಾಹಿತಿಗಳು ಮತ್ತು ಸಾಹಿತ್ಯ ಆಸಕ್ತರು ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ರಾಜ್ಯದ ಮೂವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.