
ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕಚೇರಿ ಕಟ್ಟಡ ಅತೀ ಶೀಘ್ರದಲ್ಲಿ ಆಗಲಿದ್ದು, ಹಂತ ಹಂತವಾಗಿ ಎಲ್ಲಾ ಇಲಾಖೆಗಳು ಕೂಡ ಇಲ್ಲಿ ಕರ್ತವ್ಯ ನಿರ್ವಹಿಸಲಿವೆ ಎಂದು ಮೂಡಿಗೆರೆ ತಾಲ್ಲೂಕು ಶಾಸಕಿ ನಯನ ಮೋಟಮ್ಮ ಹೇಳಿದರು.
ಕಳಸ ತಾಲ್ಲೂಕಿನಾಧ್ಯಂತ ವಿವಿಧ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ನಂತರ ಶಾಸಕರ ಕಚೇರಿಯಲ್ಲಿ ನಡೆದ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ಕಳಸದಿಂದ ಮೂಡಿಗೆರೆ ಸಾಕಷ್ಟು ದೂರದಲ್ಲಿ ಇರುವ ಕಾರಣ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನು ಕಳಸದಲ್ಲಿ ವಿತರಿಸಲಾಗುತ್ತಿದೆ ಎಂದರು.
ಇದಕ್ಕಿಂತ ಮುಂಚಿತವಾಗಿ ಕಳಸ ತಾಲ್ಲೂಕಿನ ಗಂಗಾಮೂಲ -ಕೊಟ್ಟಿಗೆಹಾರ ರಸ್ತೆ ವಿವಿಧ ಅನುದಾನದಡಿಯಲ್ಲಿ ಒಟ್ಟು 13 ಕೋಟಿ ವೆಚ್ಚದಲ್ಲಿ ಅಭಿವೃದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.ಕಳಸ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿ ಪಟ್ಟಣದ ವಿವಿಧ ರಸ್ತೆಗಳಿಗೆ 2 ಕೋಟಿ ಮೊತ್ತದ ರಸ್ತೆ ಕಾಮಗಾರಿ, ಹೊರನಾಡು-ಮಣ್ಣಿನಪಾಲ್ ರಸ್ತೆಯಿಂದ ಬಸರಿಕಟ್ಟೆ ಸೇರುವ ರಸ್ತೆಗೆ ಮೂರು ಕೋಟಿ ರೂ ಮೊತ್ತದ ಕಾಮಗಾರಿ, ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳರಪಾಲು ರಸ್ತೆಗೆ 75 ಲಕ್ಷ ಮೊತ್ತದ ಕಾಮಗಾರಿ, ಮಹಲ್ಗೋಡು ಬಳಿ 3 ಕೋಟಿ ಮೊತ್ತದ ಸೇತುವೆ ಪುನರ್ ನಿರ್ಮಾಣ ಹಾಗೂ ರಸ್ತೆ ಕಾಮಗಾರಿಗೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿದರು.
ತಾಲ್ಲೂಕಿನಲ್ಲಿ ಇನ್ನೂ ಹಲವಾರು ರಸ್ತೆಗಳ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ.ನನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ತಾ.ಪಂ ಮಾಜಿ ಸದಸ್ಯರುಗಳಾದ ರಾಜೇಂದ್ರ ಹಿತ್ಲುಮಕ್ಕಿ, ಮಹಮ್ಮದ್ ರಫೀಕ್, ಕಳಸ ಗ್ರಾ.ಪಂ ಸದಸ್ಯ ವೀರೇಂದ್ರ ಜೈನ್, ಮುಖಂಡರುಗಳಾದ ಕೆ.ಸಿ.ಮಹೇಶ್, ಗಣೇಶ್ ಭಟ್, ಸ್ಟೀಪನ್, ಪ್ರೇಮ, ರಾಮಚಂದ್ರ ಹೆಬ್ಬಾರ್ ಇತರರು ಇದ್ದರು.