
ಕಳಸ ಲೈವ್ ವರದಿ
ವಾರದ ಸಂತೆಯೊಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಸ್ವೀಟ್ ಅಂಗಡಿ ಹಾಕಿಕೊಂಡು ಅದರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಸೋಮವಾರದ ಸಂತೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಗೋಮಾಂಸ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೆಯಲ್ಲಿ ಸಿಹಿತಿಂಡಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಗಳು ಅದೇ ಅಂಗಡಿಯಲ್ಲಿ ಗುಪ್ತವಾಗಿ ಬ್ಯಾಗ್ ಒಂದರಲ್ಲಿ ದನದ ಮಾಂಸದ ಪ್ಯಾಕೇಟ್ ಗಳನ್ನು ಇಟ್ಟು ತಮ್ಮ ಕಡೆಯವರಿಗೆ ಗೌಪ್ಯವಾಗಿ ಮಾರಾಟ ಮಾಡುತ್ತಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಬಣಕಲ್ ಪೊಲೀಸರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯಲ್ಲಿ ಪರಿಶೀಲನ ನಡೆಸಿದಾಗ ಕಪ್ಪು ಬಣ್ಣದ ಬ್ಯಾಗ್ ಒಂದರಲ್ಲಿ ದನದ ಮಾಂಸದ ಪ್ಯಾಕೇಟ್ ಗಳು ಕಂಡು ಬಂದಿದ್ದವು. ಈ ಸಂಬಂಧ ಅಸ್ಸಾಂ ಮೂಲದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಸ್ಥಳೀಯರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಣಕಲ್ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಸಂತೆಯಲ್ಲಿ ಈ ರೀತಿ ಅಕ್ರಮ ವ್ಯಾಪಾರ ನಡೆಯುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ಮೂಲದವರಿಗೆ ಸಂತೆಯಲ್ಲಿ ವ್ಯಾಪಾರ ಮಾಡಲು ಲೈಸೆನ್ಸ್ ಯಾರು ಕೊಟ್ಟದ್ದು, ಅವರು ಲೈಸೆನ್ಸ್ ಪಡೆದು ವ್ಯಾಪಾರ ಮಾಡುತ್ತಿದ್ದಾರೋ, ಅಥವಾ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದಾರೋ ? ಈ ಬಗ್ಗೆ ಹಿಂದೆಯೇ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಯಾಕೆ ಕ್ರಮ ವಹಿಸಿಲ್ಲ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪಿಎಸ್ಟ್ ರೇಣುಕಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇವರೆಲ್ಲಾ ಬಾಂಗ್ಲಾ ಮೂಲದವರು, ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಕಾಫಿ ಎಸ್ಟೇಟ್ ಗಳಲ್ಲಿ ಸೇರಿಕೊಂಡಿದ್ದಾರೆ. ಎಸ್ಟೇಟ್ ಒಳಗೇ ಬರುವ ಗೋವುಗಳನ್ನು ಕಡಿದು ವಾರದ ಸಂತೆಯ ದಿನ ತಮ್ಮ ಕಡೆಯವರಿಗೆ ಹೀಗೆ ಗೌಪ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಇತ್ತೀಚಿನ ದಿನಗಳಲ್ಲಿ ಕಾಫಿನಾಡಿಗೆ ದೊಡ್ಡ ಪ್ರಮಾಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಬರುತ್ತಿದ್ದು, ಇದರಲ್ಲಿ ಬಹುತೇಕರು ಬಾಂಗ್ಲಾ ನುಸುಳುಕೋರರು ಎನ್ನಲಾಗುತ್ತಿದೆ. ತೋಟದ ಕೆಲಸಕ್ಕೆ ಬಂದಿರುವ ಕಾರ್ಮಿಕರ ಜೊತೆ ಕೆಲ ಸಮಾಜಘಾತುಕರು ಸೇರಿಕೊಂಡು ಈ ಭಾಗದಲ್ಲಿ ಕಾನೂನು ಬಾಹೀರ ಕೆಲಸದಲ್ಲಿ ತೊಡಗಿಕೊಂಡಿದ್ದು, ಈ ಬಗ್ಗೆ ಹಲವಾರು ದೂರುಗಳು ದಾಖಲಾಗುತ್ತಿವೆ. ಮನೆ ಕಳ್ಳತನ, ಗೋಮಾಂಸ ಮಾರಾಟ, ಕಾಫಿ ಕಾಳುಮೆಣಸು ಕಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇತ್ತ ಬಣಕಲ್ ನಲ್ಲಿ ಇಂದು ಕಳ್ಳ ಮಾಲುಗಳನ್ನು ಕೊಳ್ಳಬೇಡಿ ಎಂದು ಬೆಳೆಗಾರರು, ಸ್ಥಳೀಯರು ಮೆರವಣಿಗೆ ಮಾಡಿ ಜನಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿಯೇ ಇತ್ತ ಅದೇ ಬಣಕಲ್ ನ ಸಂತೆಯಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.