
oplus_0
ಕಳಸ ಲೈವ್ ವರದಿ
ಹೆಣ್ಣಿಗೆ ಹೆರಿಗೆ ಎಂಬುದು ಎರಡನೇ ಹುಟ್ಟು ಮತ್ತು ಹೊಸ ಜೀವಕ್ಕೆ ಪ್ರಾಣಕೊಡುವಂತ ಅದ್ಬುತ ಕಾರ್ಯ, ಈ ಕಾರ್ಯದಲ್ಲಿ ಸೂಲಗಿತ್ತಿಯರ ಪಾತ್ರ ಬಲು ದೊಡ್ಡದು ಎಂದು ಕಳಸ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಸಂಚಾಲಕಿ ಪೂರ್ಣಿಮಾ ಪ್ರಮೋದ್ ಹೇಳಿದರು.
ಕರ್ನಟಕ ಜಾನಪದ ಪರಿಷತ್ತು ವತಿಯಿಂದ ಕಳಸದ ಕೆಪಿಎಸ್ ಬಾಲಕೀಯರ ಶಾಲೆಯಲ್ಲಿ ನಡೆದ ಜಾನಪದ ಜಗುಲಿ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಸೂಲಗಿತ್ತಿಯರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದ ಅವರು ಈಗ ಆಸ್ಪತ್ರೆಗಳಲ್ಲಿ ಎಷ್ಟೇ ಆಧುನಿಕ ಸೌಲಭ್ಯಗಳು ಇದ್ದರೂ ಕೂಡ ಅನೇಕ ಹಳ್ಳಿಗಳಲ್ಲಿ ಸೂಲಗಿತ್ತಿಯರು ಆರೋಗ್ಯ ಸೇವೆಗಳಿಗೆ ಮತ್ತು ಜನ ಸಾಮಾನ್ಯರಿಗೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ.ಹಳ್ಳಿಗಳಲ್ಲಿ ಸೂಲಗಿತ್ತಿಯರು ಕೇವಲ ಆರೋಗ್ಯ ಕಾರ್ಯಕರ್ತೆಯಾಗಿರದೆ ಅವರು ಎಲ್ಲಾ ಸಮುದಾಯದ ವಿಶ್ವಾಸಾರ್ಹವ್ಯಕ್ತಿಗಳಾಗುತ್ತಿದ್ದರು.ಅವರು ತಾಯಂದಿರು ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುವುದಲ್ಲದೆ ಮನೆಯಲ್ಲಿ ಒಬ್ಬರಂತೆ ಇದ್ದು ಹೆರಿಗೆಯಂತ ಸೂಕ್ಷ್ಮ ಸಮಯದಲ್ಲಿ ನೆರವಾಗುತ್ತಿದ್ದರು ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ ಸೂಲಗಿತ್ತಿಯರಾಗಿದ್ದ ನರಸಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು ಅವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಸೂಲಗಿತ್ತಿಯಾಗಿ ಕೆಲಸ ಮಾಡಿ ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿದಂತ ಮಹಾ ತಾಯಿಯಾಗಿದ್ದರು ಎಂದು ಹೇಳಿದರು.
ಕಜಾಪ ಅಧ್ಯಕ್ಷ ರಜಿತ್ ಕೆಳಗೂರು ಮಾತನಾಡಿ ಜಾನಪದ ಮತ್ತು ಸೂಲಗಿತ್ತಿ ಈ ವಿಚಾರಕ್ಕೆ ಒಂದಕ್ಕೊಂದು ಸಂಭಂದ ಇದೆ. ಮಕ್ಕಳಿಗೆ ಸೂಲಗಿತ್ತಿಯವರ ಪಾತ್ರದ ಬಗ್ಗೆ ಅರಿವು ಮೂಡಿಸುವಂತ ಕಾರ್ಯಗಳು ಆಗಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಯೋಜಿಸಲಾಗಿದೆ. ಹಾಗೂ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಮಾಡುವುದರ ಜೊತೆ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ.ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಹಿಂದೆ ಮನೆ ಮನೆಗೆ ಹೋಗಿ ಹೆರಿಗೆ ಮಾಡಿಸಿ ಕಳಸ ಆರೋಗ್ಯ ಕೇಂದ್ರ ಕರ್ತವ್ಯ ನಿರ್ವಹಿಸಿ ನಿವೃತ್ತಿಯನ್ನು ಪಡೆದ ಸರೋಜ ಅಣ್ಣಪ್ಪ ಇವರನ್ನು ಗೌರವಿಸಲಾಯಿತು.ಅವರ ಸನ್ಮಾನ ಪತ್ರವನ್ನು ಆಶಾ ರಾಘವೇಂದ್ರ ಓದಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಚಿಂತನ್ ನೆರವೇರಿಸಿ, ಸ್ವಾಗತವನ್ನು ನಿಖಿತ ಸಂತೋಷ್ ಮಾಡಿ, ನಗೀನಾ ಖಾದÀರ್ ಎಲ್ಲರನ್ನು ವಂದಿಸಿದರು.
ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಕಳಸ ಹೋಬಳಿ ಕಸಾಪ ಅಧ್ಯಕ್ಷ ಶೇಖರ ಶೆಟ್ಟಿ, ಕಳಸ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುಮನ ಜಯರಾಜ್,ಕೆಪಿಎಸ್ ಮುಖ್ಯ ಶಿಕ್ಷಕಿ ನಗ್ಮಾ ಬಾನು, ಕಲ್ಲುಬಾವಿ ಅಂಗನವಾಡಿ ಕರ್ಯಕರ್ತೆ ಸರೋಜ, ಗಣೇಶ್ ಕುಕ್ಕೋಡು, ಶಮೀರ್ ಇತರರು ಇದ್ದರು.