


ಕಳಸ ಲೈವ್ ವರದಿ
ಕಳಸ ಪೊಲೀಸರ ಮಿಂಚಿನ ಕಾರ್ಯಚರಣೆಯಲ್ಲಿ ಕಟುಕರ ಪಾಲಾಗುತ್ತಿದ್ದ ನಾಲ್ಕು ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಲಿಗೆ-ಹೊರನಾಡು ಕಡೆಯಿಂದ ಬಂದ ಮಹಿಂದ್ರಾ ಝೈಲೋ ವಾಹನದ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದರಿಂದ ಕಳಸ ಪೊಲೀಸರು ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಚುರುಕಾಗಿ ಕಾರ್ಯಾಚಣೆ ಆರಂಭಿಸಿದರು. ಆ ವಾಹನ ದಾರಿಮನೆ-ಹಳುವಳ್ಳಿ ರಸ್ತೆಯಲ್ಲಿ ಸಾಗಿದ ಬಗ್ಗೆ ಖಚಿತಪಡಿಸಿಕೊಂಡು ಪೊಲೀಸರು ಕೂಡ ಅದೇ ಮಾರ್ಗದಲ್ಲಿ ಬೆಳಗಿನ ಜಾವ ೧.೩೦ರ ಸುಮಾರಿಗೆ ಹೊರಟರು.
ಸ್ವಲ್ಪ ದೂರ ಸಾಗಿದಾಗ ದನ ಕಳ್ಳರು ವಾಹನಕ್ಕೆ ಜಾನುವಾರು ತುಂಬಿಸುತ್ತಿದ್ದು ಕಂಡು ಬಂತು. ಪೊಲೀಸ್ ವಾಹನ ಕಳ್ಳರ ವಾಹನಕ್ಕಿಂತ ಮುಂದೆ ಹೋಗಿ ಅವರ ವಾಹನ ಅಡ್ಡಗಟ್ಟಿತು. ಅಷ್ಟರಲ್ಲಿ ಕಳ್ಳರು ತಮ್ಮ ವಾಹನವನ್ನು ರಿವರ್ಸ್ ಓಡಿಸಿಕೊಂಡು ಪರಾರಿಯಾಗಲು ಯತ್ನಿಸಿದರು. ಸ್ವಲ್ಪ ದೂರ ರಿವರ್ಸ್ ಸಾಗಿದ ನಂತರ ವಾಹನವನ್ನೂ ಅಲ್ಲೇ ಬಿಟ್ಟು ರಸ್ತೆ ಪಕ್ಕದ ಕಾಫಿ ತೋಟದ ಒಳಗೆ ಕಳ್ಳರು ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದನಕಳ್ಳರ ವಾಹನದಲ್ಲಿ ೪ ಹಸುಗಳು, ೩ ಫೋನ್ ಮತ್ತು ಒಂದು ಕಬ್ಬಿಣದ ರಾಡ್ ಪತ್ತೆ ಆಗಿದೆ.ವಾಹನದ ನಂಬರ್ ಪ್ಲೇಟ್ ನಕಲಿಯಾಗಿದ್ದು, ಅಸಲಿ ನಂಬರ್ ಪ್ಲೇಟ್ ವಾಹನದ ಒಳಗಡೆ ಇತ್ತು ಎನ್ನಲಾಗುತ್ತಿದೆ.
ಲಭ್ಯವಿರುವ ಮಾಹಿತಿ ಅನುಸರಿಸಿ ಕಳ್ಳರನ್ನು ಸದ್ಯದಲ್ಲೇ ಬಂಧಿಸುವ ವಿಶ್ವಾಸ ಇದೆ ಎದು ಕಳಸ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಕುಮಾರ್, ಗಿರೀಶ್, ಚಂದ್ರಶೇಖರ್ ಕೊಠಾರಿ, ಪ್ರಮೋದ್, ಸುನೀಲ್ ಇದ್ದರು.
